
ಧಾರವಾಡ 1o : ಪರಿಸರ,ವನ್ಯಜೀವಿ ಸಂರಕ್ಷಣೆಯಲ್ಲಿ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉದ್ಯಾನ ರಚನೆಯಲ್ಲಿ ತೊಡಗಿಕೊಂಡು ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಿ ತೊಡಗಿಸಿಕೊಂಡವರು ಉದ್ಯಾನರಚನೆಗಾರ ಪಂಚಾಕ್ಷರಿ ಹಿರೇಮಠ ಅವರು. ಸ್ವಾತಂತ್ರ ಸೇನಾನಿ ದಿವಂಗತ ಶ್ರೀ ವಿರೂಪಾಕ್ಷಯ್ಯ ಹಿರೇಮಠ ಹಾಗೂ ಶ್ರೀಮತಿ ಸಿದ್ಧಲಿಂಗಮ್ಮ ಅವರ ಸುಪುತ್ರರಾದ ಇವರು
ಸ್ವಗ್ರಾಮ ಹೊಸಳ್ಳಿಯಲ್ಲಿ ಪ್ರಾಥಮಿಕ ಶಾಲೆ ವಿ. ಎಫ್. ಪಾಟೀಲ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಮುಗಿಸಿ ವಿದ್ಯಾಕಾಶಿ ಧಾರವಾಡದಲ್ಲಿ ಪದವಿ ಪಡೆದರು. ಅದರೊಂದಿಗೆ ಕಾನೂನು ಅಭ್ಯಾಸ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ನೇಚರ್ ಫಸ್ಟ್ ಇಕೋ ವಿಲೇಜ್ ಸಂಸ್ಥಾಪಕರಾಗಿ, ಪರಿಸರ ಹಮ್ಮಿಕೆಗಳ ವಿಭಾಗದ ಮತ್ತು ನೇಚರ್ ರಿಸರ್ಚ್ ಸೆಂಟರ್ ನ ಅಧ್ಯಕ್ಷರಾಗಿ ಧಾರವಾಡ ನಗರ ಹಾಗೂ ಗ್ರಾಮಾಂತರ ಜಿಲ್ಲೆ ಮತ್ತು ವಿವಿಧ ರಾಜ್ಯಗಳಲ್ಲಿ ಉದ್ಯಾನಗಳ ಉದ್ಯಮಿಯಾಗಿ ಉದ್ಯಾನಗಳ ರಚನೆಗಾರರಾಗಿ ಸುಮಾರು 20 ವರ್ಷಗಳಿಂದಲೂ ಕಾರ್ಯಮಾಡುತ್ತಾ ಪರಿಸರ ಸಂರಕ್ಷಣೆಯೊಂದಿಗೆ ಯುವ ಸಮುದಾಯಕ್ಕೆ ಮಾದರಿಯಾಗಿ ನಿಲ್ಲುತ್ತಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲ.
ತೋಟಗಾರಿಕೆ ಮತ್ತು ಹಸಿರು ಪರಿಸರದ ಬಗ್ಗೆ ಅದರಲ್ಲೂ ಲ್ಯಾನ್ಡಸ್ಕೇಪ್ ಗಾರ್ಡನಿಂಗ್ ಕ್ಷೇತ್ರದಲ್ಲಿ ವಿಶೇಷ ಅನುಭವವನ್ನು ಹೊಂದಿರುವ ಅವರು ಹೈದರಾಬಾದ್ ನಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸಿ ಸತತ 20 ವರ್ಷಗಳ ಕಾಲ ನಿರಂತರ ಹೆಸರಾಂತ ಸಂಸ್ಥೆಗಳಾದ ಮೈಕ್ರೋಸಾಫ್ಟ್, lllTಯಂತಹ ಉದ್ಯಮಗಳಿಗೆ ಸುಮಾರು 50ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಶಾಶ್ವತ ಜೀವನಶೈಲಿಯ ಬಗ್ಗೆ ಜನರಿಗೆ ಅರಿವನ್ನು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಮಲೆನಾಡಿನ ಸೆರಗು ಧಾರವಾಡ ಮತ್ತು ಹಳಿಯಾಳ ರಸ್ತೆಯಲ್ಲಿ ನೇಚರ್ ಫಸ್ಟ ಇಕೋ ವ್ಹಿಲೇಜ್ ಎನ್ನುವ ಪ್ರಾಕೃತಿಕ ವಸತಿ ಸಂಕುಲವು 15ಕ್ಕೂ ಹೆಚ್ವಿನ ಶಾಸ್ವತ ಜೀವನ ಮಾದರಿಗಳು, ಗ್ರಾಮೀಣ ಆಟಗಳಲ್ಲದೇ ವಿವಿಧ ಮನೊರಂಜನಾ ವ್ಯವಸ್ಥೆಗಳನ್ನು ಹೊಂದಿದ್ದು ಪ್ರತಿದಿನ ನೂರಾರು ಪ್ರವಾಸಿಗರನ್ನು ಸೆಳೆಯುವ ನಿಸರ್ಗಧಾಮವನ್ನು ಸ್ಥಾಪಿಸಿದ ಕೀರ್ತಿ ಪಂಚಾಕ್ಷರಿ ಹಿರೇಮಠ ಅವರದ್ದು. ಇದೇ ಇಕೋ ವಿಲೇಯನಲ್ಲಿ ಭಾರತದ ಮೊದಲ ತಳಗೊಳ ಜಲಾಶಯ ನಿರ್ಮಿಸಿದ್ದಾರೆ.
ಈ ಹಿನ್ನೆಲೆಯಲ್ಲಿಯೇ ಈ ಇಕೋ ವಿಲೇಜ್ ನ್ನು ಪ್ರವಾಸಿ ತಾಣ ಎಂದು ಸರಕಾರ ಘೋಷಣೆ ಮಾಡಿದೆ. ಅವಳಿ ನಗರ ಹುಬ್ಬಳ್ಳಿ- ಧಾರವಾಡದಲ್ಲಿ ಸಾವಿರಾರು ಗಿಡಮರಗಳನ್ನು ನೆಟ್ಟು, ಅವುಗಳನ್ನು ಅತ್ಯಂತ ಕಾಳಜಿಯಿಂದ ವೈಯಕ್ತಿಕ ವೆಚ್ಚದಲ್ಲಿ ಪೋಷಣೆ ಮಾಡುತ್ತಿದ್ದಾರೆ. ಇಕೋ ವ್ಹಿಲೇಜ್ ಕೇವಲ ಪ್ರವಾಸಿತಾಣ ಅಷ್ಟೇ ಅಲ್ಲದೇ ಅದರಿಂದ ಬರುವ ಲಾಭಾಂಶದ 25% ಪರಿಸರ ಸಂರಕ್ಷಣೆಗೆ, ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಪರಿಸರ ಶಿಕ್ಷಣಕ್ಕೆ ಬಳಸುತ್ತಿದ್ದಾರೆ. ಇದು ಅವರ ಜೀವನಶೈಲಿಯ ವೈಶಿಷ್ಟ್ಯವಾಗಿದೆ.
ಅವರ ಈ ಎಲ್ಲ ಸಾಧನೆಗಳನ್ನು ಗುರುತಿಸಿ ಅವರಿಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಅವುಗಳಲ್ಲಿ ಅವ್ವಾ ಪ್ರಶಸ್ತಿ, ಕರ್ನಾಟಕ ರಾಜ್ಯ ನೌಕರರ ಸಂಘದಿಂದ ನೀಡುವ ಕರ್ನಾಟಕ ರತ್ನ, ಅಂತಃಕರಣ ಫೌಂಡೇಶನ್ ಪ್ರಶಸ್ತಿ, ದೇಶಪಾಂಡೆ ಫೌಂಡೇಶನ್ ನೀಡುವ LEAD ಪ್ರಶಸ್ತಿ, ಪ್ರಮುಖವಾದವುಗಳಾಗಿವೆ. ಪಂಚಾಕ್ಷರಿ ಹಿರೇಮಠ ಅವರ ಪರಿಸರ ಕಾಳಜಿ ಹಾಗೂ ಶಾಶ್ವತವಾದ ಜೀವನ ಶೈಲಿಯ ಅಭಿವೃದ್ಧಿಯ ಪ್ರಯತ್ನಗಳು ಯುವ ಸಮುದಾಯಕ್ಕೆ ಸ್ಪೂರ್ತಿದಾಯಕವಾಗಿವೆ.
ಅವರು ಯುವ ಉದ್ಯಮಿಗಳಿಗೆ ಮಾರ್ಗದರ್ಶನ ಮಾಡುತ್ತಾ ಅವರ ಬದುಕಿಗೆ ಆಶರೆಯ ಯೋಜನೆಗಳನ್ನು ರೂಪಿಸುವ ಹಿನ್ನಲೆ, ಪರಿಸರ ಕಾಳಜಿ, ಯುವಸಮುದಾಯದ ಆಶಾಕಿರಣರಾದ ಪಂಚಾಕ್ಷರಿ ಹಿರೇಮಠ ಅವರನ್ನು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡದವರು ದಿನಾಂಕ 15-02-2025 ರ ಶನಿವಾರದಂದು ಒಂದು ದಿನ ಹಮ್ಮಿಕೊಂಡ ಯುವ ಚಿಂತನಾ ಸಮಾವೇಶದ ಸರ್ವಾದ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಯುವ ಸಮುದಾಯಕ್ಕೆ ಸಂದ ಗೌರವವಾಗಿದೆ ಮತ್ತು ಪ್ರತಿಷ್ಠಾನದ ಕಾರ್ಯಕ್ಕೂ ಒಂದು ಪ್ರೇರಣೆಯಾಗಿದೆ.