ಧಾರವಾಡ ೦೫ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಧಾರವಾಡದ ವತಿಯಿಂದ ಇದೇ ದಿ.6 ರಿಂದ 10 ರವರೆಗೆ ಧಾರವಾಡ ತಾಲೂಕಿನ ದಡ್ಡಿಕಮಲಾಪೂರದ ಸಸ್ಯಚೇತನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ಗೆ ಆಗಮಿಸುತ್ತಿರುವ 8 ಜಿಲ್ಲೆಗಳ ಸುಮಾರು 1000 ಮಕ್ಕಳಿಗೆ ಹಾಗೂ 200 ಸಿಬ್ಬಂದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವ್ಯವಸ್ಥಿತವಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿ ಯಶಸ್ವಿಗೊಳಿಸಬೇಕೆಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕರೆಯಿತ್ತರು.
ವಿಭಾಗ ಮಟ್ಟದ ಪ್ರಥಮ ಕಿತ್ತೂರು ಕರ್ನಾಟಕ ಜಾಂಬೋರೇಟ್ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಯ ಮುಖ್ಯಸ್ಥರ ಸಭೆ ನಡೆಸಿ ಸೂಚನೆಗಳನ್ನು ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯವರು ಭಾರತ ಸ್ಕೌಟ್ಸ್, ಗೈಡ್ಸ್, ರೇಂಜರ್ಸ್ ಮತ್ತು ರೋವರ್ಸ್ ಮಕ್ಕಳು ಭಾಗವಹಿಸುವಂತೆ ಸೂಕ್ತ ವ್ಯವಸ್ಥೆ ಮಾಡಬೇಕು.ಮಕ್ಕಳ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯವರು,ಸುರಕ್ಷತೆಯ ಬಗ್ಗೆ ಆರಕ್ಷಕರು, ಸಾರಿಗೆಗಾಗಿ ಕೆ.ಎಸ್.ಆರ್.ಟಿ.ಸಿಯವರು,ನಿರಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಚತೆಯ ಬಗ್ಗೆ ಗ್ರಾಮ ಪಂಚಾಯತ್ ಹಾಗೂ ಮಹಾನಗರ ಪಾಲಿಕೆಯವರು ಮತ್ತು ಜಲಮಂಡಳಿಯವರು,ನಿರಂತರ ವಿದ್ಯುತ್ ನ ವ್ಯವಸ್ಥೆಯನ್ನು ಹೆಸ್ಕಾಂ ದವರು,ಅಗ್ನಿ ಅವಗಡದ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲು ಅಗ್ನಿಶಾಮಕ ದಳದವರು ಹೀಗೆ ಇನ್ನೂ ಮುಂತಾದ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದ ಇಲಾಖೆಯವರು ಕಾರ್ಯಪ್ರವೃತರಾಗಿ ಕಾರ್ಯಕ್ರಮದ ಯಶಸ್ಸಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಧಾರವಾಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಯವರು ಹೇಳಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀಶೈಲ ಚ ಕರಿಕಟ್ಟಿ ಯವರು ಅಪರ ಜಿಲ್ಲಾಧಿಕಾರಿಗಳನ್ನು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಸ್ವಾಗತಿಸಿ.ಕಾರ್ಯಕ್ರಮದ ರೂಪರೇಷೆಗಳನ್ನು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಕಾಲೆಜು ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ,ಜಿಲ್ಲಾ ಖಜಾಂಚಿ ಬಸವರಾಜ ಕಡಕೋಳ,ಜಿಲ್ಲಾ ಸ್ಕೌಟ್ಸ್ ಆಯುಕ್ತ ಎಸ್.ಆಯ್.ನೇಕಾರ,ಜಿಲ್ಲಾ ರೋವರ್ ಆಯುಕ್ತ ಡಿ.ಡಿ.ಮಾಳಗಿ,ಸ್ಥಾನಿಕ ಆಯುಕ್ತ ಎಸ್.ವ್ಹಿ.ಮೊರಬ,ಕಾಂಬಳೆ,ನಿವೃತ್ತ ಶಿಕ್ಷಣಾಧಿಕಾರಿ ವ್ಹಿ.ವ್ಹಿ.ಕಟ್ಟಿ,ಸಹಾಯಕ ಆಯುಕ್ತರಾದ ಮಂಜುನಾಥ ಅಡಿವೇರ,ಎಮ್.ಎಸ್.ಶಿವಳ್ಳಿಮಠ ,ಆರೋಗ್ಯಇಲಾಖೆ,ಹೆಸ್ಕಾಂ,ಜಲಮಂಡಳಿ,ಕೆ.ಎಸ್.ಆರ್.ಟಿ.ಸಿ,ಅಗ್ನಿಶಾಮಕ, ತಾಲೂಕಾ ಪಂಚಾಯತ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.