ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತಕ್ಕೆ ₹180 ಕೋಟಿ

ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ಕೆ ರೈತರಿಂದ ಧನ್ಯವಾದ

ಬೆಂಗಳೂರು : ಬೇಡ್ತಿ ನದಿಯ ಏತ ನೀರಾವರಿ ಯೋಜನೆ ಎರಡನೇ ಹಂತದಲ್ಲಿ 107 ಕೆರೆಗಳನ್ನು ತುಂಬಿಸಲು ರಾಜ್ಯ ಸರ್ಕಾರದ ₹180 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

ಈಗಾಗಲೇ ಸುಮಾರು ₹60 ಕೋಟಿ ವೆಚ್ಚದ 40 ಕೆರೆಗಳನ್ನು ತುಂಬುವ ಕಾರ್ಯ ಸಂತೋಷ್ ಲಾಡ್ ಅವರ ಅವಿರತ ಪ್ರಯತ್ನದಿಂದ ಪೂರ್ಣಗೊಂಡಿದ್ದು, ಇದೀಗ ಎರಡನೇ ಹಂತಕ್ಕೆ ಸರ್ಕಾರ ಹಣ ನೀಡಿದೆ. ಬಹು ನಿರೀಕ್ಷಿತ ಯೋಜನೆಗೆ ಸರ್ಕಾರ ಸ್ಪಂದಿಸಿರುವುದಕ್ಕೆ ಅನ್ನದಾತರು ಖುಷಿಗೊಂಡಿದ್ದು, ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಕಲಘಟಗಿ ತಾಲೂಕಿನ ಮಹತ್ವಾಕಾಂಕ್ಷಿ ಬೇಡ್ತಿ ನದಿಯ ಏತ‌ ನೀರಾವರಿ ಯೋಜನೆ ಯ ಎರಡನೇ ಹಂತದ 107 ಕೆರೆಗಳನ್ನು ತುಂಬುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ ಕೊಡಿಸಲು ಸಚಿವ ಲಾಡ್‌ ಅವರು ಸಾಕಷ್ಟು ಶ್ರಮಿಸಿದ್ದರು. ಲಘಟಗಿ-ಅಳ್ನಾವರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸಂತೋಷ್ ಲಾಡ್ ಅವರು ತಾಲೂಕಿನ‌ ಅನ್ನದಾತರಿಗೆ ಕೊಟ್ಟ ಮಾತನ್ನು ಮತ್ತೊಮ್ಮೆ ಉಳಿಸಿಕೊಂಡಿದ್ದಾರೆ.

ಸಿಎಂ, ಡಿಸಿಎಂಗೆ ಧನ್ಯವಾದ ತಿಳಿಸಿದ ಲಾಡ್‌  ಬಹು ನಿರೀಕ್ಷಿತ ಯೋಜನೆಯ ಸಾಕಾರಕ್ಕೆ ಸಹಕಾರ ನೀಡುತ್ತಿರುವ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ, ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೃಹತ್ ನೀರಾವರಿ ಸಚಿವರಾದ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಸಚಿವ ಲಾಡ್‌ ಅವರು ಧನ್ಯವಾದ ತಿಳಿಸಿದ್ದಾರೆ.

ಸಚಿವರಿಗೆ ಅನ್ನದಾತರಿಂದ ಕೃತಜ್ಞತೆ

ಸಚಿವ ಲಾಡ್‌ ಅವರ ಅವಿರತ ಶ್ರಮದಿಂದ ಈ ಕಾರ್ಯ ಸಾಕಾರವಾಗಿದ್ದು, ಅಸಂಖ್ಯಾತ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಕಲಘಟಗಿಯಂತಹ ನೀರಿನ ಕೊರತೆಯ ತಾಲೂಕಿಗೆ ಇಂತಹ ಯೋಜನೆ ಅವಶ್ಯವಾಗಿ ಬೇಕಾಗಿತ್ತು. ಇದೀಗ ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿದೆ. ಆಧುನಿಕ ಭಗೀರಥನಂತೆ ಸಚಿವ ಲಾಡ್‌ ಅವರು ನಮಗಾಗಿ ದುಡಿದಿದ್ದಾರೆ ಎಂದು ಕಲಘಟಗಿಯ ರೈತರು ಖುಷಿ ವ್ಯಕ್ತಪಡಿಸಿದ್ದಾರೆ.