
ಧಾರವಾಡ:– ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 136 ಸೀಟುಗಳನ್ನು ಪಡೆದು ಗೆಲುವು ದಾಖಲಿಸಿದೆ . ಈಗಾಗಲೇ ಎರಡು ವರ್ಷ ಈ ಸರ್ಕಾರದ ಅವಧಿ ಪೂರ್ಣಗೊಂಡಿದೆ . 136 ಸೀಟು ಕೊಟ್ಟ ಜನರಿಗೆ ಈ ಸರ್ಕಾರ ಒಳ್ಳೆಯ ಆಡಳಿತ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು , ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟದ್ದು . ಯಾರು ಸಿಎಂ ಆಗ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದರೆ , ಈಗಿರುವ ಭ್ರಷ್ಟಾಚಾರ ಕೊನೆಯಾಗಬೇಕು . ಕಾಂಗ್ರೆಸ್ನವರು ಸಾಕಷ್ಟು ದುಡ್ಡು ಮಾಡಿದ್ದಾರೆ . ಅದನ್ನು ಕೊನೆಗೆ ಯಾರೂ ತೆಗೆದುಕೊಂಡು ಹೋಗುವುದಿಲ್ಲ. ದಯಮಾಡಿ ಜನರಿಗೆ ಒಳ್ಳೆಯ ಆಡಳಿತ ಕೊಡಿ ಎಂದರು.
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣ ರಾಜ್ಯ ಸರ್ಕಾರದ ನಿಷ್ಕಾಳಜಿಯಿಂದ ಆಗಿದೆ . ಸಿಎಂ ಹಾಗೂ ಡಿಸಿಎಂ ಒಬ್ಬರಿಗೊಬ್ಬರು ತಾವು ದೊಡ್ಡ ನಾಯಕರಾಗಬೇಕು ಎಂದು ವಿಜಯೋತ್ಸವ ಮಾಡಿ 11 ಜನರ ಬಲಿ ಪಡೆದುಕೊಂಡಿದ್ದಾರೆ . ಇದಕ್ಕೆ ಸಿಎಂ ಹಾಗೂ ಡಿಸಿಎಂ ಅವರೇ ನೇರ ಕಾರಣ . ತಾವು ಉಳಿಯುವ ಸಲುವಾಗಿ ಪೊಲೀಸ್ ಅಧಿಕಾರಿಗಳನ್ನು ಇವರು ಬಲಿ ಕೊಟ್ಟಿದ್ದಾರೆ. ಇದರ ವಿರುದ್ಧ ನಾವು ಪ್ರತಿಭಟನೆ ಮಾಡಿದ್ದೇವೆ ಎಂದರು.