ಧಾರವಾಡ 10 : ಸೋಮವಾರ ಸಂಜೆ ಜಿಲ್ಲೆಯ ನವಲಗುಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸತತ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ದಿವ್ಯಪ್ರಭು ನವಲಗುಂದ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆ ನೀರು ಉಕ್ಕಿ ಹರಿದ ಅಂಬಲಿ ಹಳ್ಳ, ಈ ಹಳ್ಳಕ್ಕೆ ಯಾವ್ಯಾವ ಕಡೆಯಿಂದ ನೀರು ಹರಿದು ಬರುತ್ತದೆ? ಹಳ್ಳ ಉಕ್ಕಿ ಹರಿದು ಜನ, ವಾಹನ ಸಂಚಾರ ಸೇರಿದಂತೆ ಸಂಪರ್ಕ ಕಡಿತವಾದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂಬಲಿ ಹಳ್ಳದ ಹತ್ತಿರವೇ ಇರುವ ಹುರಕಡ್ಲಿ ಅಜ್ಜ ಶಿಕ್ಷಣ ಸಂಸ್ಥೆಯ ಎಸ್.ಎಸ್ ಬಾಗಿ ಆಂಗ್ಲ ಮಾಧ್ಯಮ ಶಾಲೆಗೂ ಜಿಲ್ಲಾಧಿಕಾರಿ ಭೇಟಿ ನೀಡಿದರು.

ವಿದ್ಯಾರ್ಥಿನಿಯರು ಪುಷ್ಪ ನೀಡಿ ಸ್ವಾಗತಿಸಿದರು: ಸೋಮವಾರ ಸಂಜೆ ದಿಢೀರ್ ಮಳೆ ಬಂದು ಅಂಬಲಿ ಹಳ್ಳಿ ಉಕ್ಕಿ ಹರಿದು ತಾವು ಊರ ಸೇರಲು ಎದುರಾದ ಸಂಕಷ್ಟ, ವಿಪತ್ತು ನಿರ್ವಹಣಾ ಪಡೆ ರಕ್ಷಣೆಗೆ ಧಾವಿಸಿ ಬಸ್ಸಿನಲ್ಲಿ ಪಟ್ಟಣಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಹೋದ ಸಂಗತಿಯನ್ನು ವಿದ್ಯಾರ್ಥಿನಿಯರು ವಿವರಿಸಿದರು. ಅಂಬಲಿ ಹಳ್ಳ ಉಕ್ಕಿಹರಿದಾಗ ಎದುರಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಶಾಲಾ ಮಕ್ಕಳು, ಪೋಷಕರು, ಗ್ರಾಮಸ್ಥರು ಮನವಿ ಮಾಡಿದರು.

ಶಾಸಕ ಎನ್.ಎಚ್.ಕೋನರಡ್ಡಿ ಅವರು ಜಿಲ್ಲಾಧಿಕಾರಿಗೆ ಸಮಸ್ಯ ವಿವರಿಸಿದರು ತುರ್ತು ಪರಿಹಾರ ಕ್ರಮಗಳಿಗೆ ಮನವಿ ಮಾಡಿದರು.ಎಸ್ಪ್ ಡಾ.ಗೋಪಾಲ ಬ್ಯಾಕೋಡ, ತಹಶೀಲ್ದಾರ ಸುಧೀರ ಸಾಹುಕಾರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.