ಧಾರವಾಡ : ಸಮಾಜಕ್ಕೆ ಧ್ಯೇಯ, ನಿಷ್ಠೆ ಹಾಗೂ ನಿರ್ಭಿಡೆಯಿಂದ ಕಾರ್ಯ ನಿರ್ವಹಿಸುವ ನಿಷ್ಠಾವಂತ ಪತ್ರಕರ್ತರು ಬೇಕು ಅಲ್ಲದೇ ಸಮಾಜದ ಓರೆ ಕೋರೆಗಳನ್ನು ಸರಿಪಡಿಸಲು ಪತ್ರಿಕಾರಂಗ ಸೂಕ್ತವಾದುದು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಗಂಗಾಧರಪ್ಪ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂವಹನ ಕೂಟದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಿಕೋದ್ಯಮದ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಶೀಲರಾಗಬೇಕು ಹಾಗೂ ಈಗಿನಿಂದಲೇ ಧೈರ್ಯವಾಗಿ ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದ ಅವರು ಸಮಾಜದಲ್ಲಿ ಪತ್ರಿಕಾರಂಗವು ಕಾವಲು ನಾಯಿಯಾಗಿ ತನ್ನ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಪತ್ರಿಕೋದ್ಯಮದ ಘನತೆ ಗೌರವಗಳನ್ನು ಎತ್ತಿ ಹಿಡಿಯಬೇಕು ಎಂದರು.
ವಿದ್ಯುನ್ನಮಾನ ಮಾದ್ಯಮ ಪತ್ರಕರ್ತ ಜಾವೀದ ಅಧೋನಿ ಮಾತನಾಡಿ, ಟಿ.ವಿ. ಮಾಧ್ಯಮ ಇಂದು ಸಾಕಷ್ಟು ಮುಂಚೂಣಿಯಲ್ಲಿದೆ. ವೀಕ್ಷಕರು ನ್ಯೂಸ್ ಚಾನೆಲ್ಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಆದ್ದರಿಂದ ಪತ್ರಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು.
ಇಂದು ಪತ್ರಕರ್ತರು ಸುದ್ದಿ ನೀಡುವ ಧಾವಂತದಲ್ಲಿ ಹಲವು ರೀತಿಯ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಪತ್ರಿಕಾರಂಗ ಬೆಳೆಯುತ್ತಿರುವ ಬಗೆಯನ್ನು ಕುತೂಹಲ ಕಂಗಳಿದ ಗಮನಿಸಬೇಕು ಅಲ್ಲದೇ ಮಾಧ್ಯಮದಲ್ಲಿ ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸುವ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಈಗಿನಿಂದಲೇ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಸಂಜಯಕುಮಾರ ಮಾಲಗತ್ತಿ ಮಾತನಾಡಿ, ಸಾಂಪ್ರದಾಯಿಕ ಮಾಧ್ಯಮಗಳು ಇಂದು ನವ ಮಾಧ್ಯಮಗಳೊಂದಿಗೆ ಪೈಪೋಟಿ ನಡೆಸುವ ಅನಿವಾರ್ಯತೆ ಇದೆ ವಿದ್ಯಾರ್ಥಿಗಳು ನವ ಮಾಧ್ಯಮಗಳನ್ನು ಸದ್ಭಳಕೆ ಮಾಡಿಕೊಳ್ಳುವುದರ ಜೊತೆಗೆ ಸಾಂಪ್ರದಾಯಿಕ ಮಾಧ್ಯಮಗಳನ್ನು ಬಳಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಭಾಗದ ಹಿಂದಿನ ವಿದ್ಯಾರ್ಥಿ ಡಾ.ರವೀಂದ್ರ ಜಲರಡ್ಡಿ ಒಡೆತನದ ಆರ್.ಜೆ.ಮೀಡಿಯಾ ಸಂಸ್ಥೆ ಹೊರತಂದ 2025 ರ ಕ್ಯಾಲೆಂಡರ್ನ್ನು ಪ್ರೊ.ಎಂ.ಗಂಗಾಧರಪ್ಪ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ವಿಶ್ವನಾಥ ಚಿಂತಾಮಣಿ, ಡಾ. ಮಂಜುನಾಥ ಅಡಿಗಲ್, ಡಾ. ರವೀಂದ್ರ ಜಲರೆಡ್ಡಿ ಮತ್ತಿತ್ತರರು ಹಾಜರಿದ್ದರು. ಮಲ್ಲಪ್ಪ ಹಳೇಮನಿ ನಿರೂಪಿಸಿದರು. ಮೀನಾಕ್ಷಿ ಬಡಿಗೇರ ಪ್ರಾರ್ಥಿಸಿದರು ಸ್ನೇಹಾ ರಾಠೋಡ ವಂದಿಸಿದರು.