
ಧಾರವಾಡ 29 : ಧಾರವಾಡ ಅರಣ್ಯ ವಲಯದ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಟಾವಣೆ ಮಾಡಿ, ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಿರುವ ಖಾಸಗಿ ವ್ಯಕ್ತಿಗಳು ಹಾಗೂ ಅದಕ್ಕೆ ಸಹಕಾರ ನೀಡಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶಕುಮಾರ ಅವರಿಗೆ ಸಲ್ಲಿಸಿದ ಮನವಿಯಲ್ಲಿ
ಒತ್ತಾಯಿಸಿದ್ದಾರೆ.
ಧಾರವಾಡ ಅರಣ್ಯ ವಲಯದ ಬಣದೂರ ಶಾಖೆಯ ಹಳ್ಳಿಗೇರಿ ಹದ್ದಿನಲ್ಲಿನ ಕಾಯ್ದಿಟ್ಟ ಅರಣ್ಯ ಸ. ನಂ. 22 ರಲ್ಲಿ ಸುಮಾರು ನೂರಾರು ಸಾಗವಾನಿ, ಮತ್ತಿ ಇತರೆ ಜಾತಿಯ ಮರಗಳನ್ನು ಕಟಾವು ಮಾಡಲಾಗಿದೆ.
ಅಲ್ಲದೇ ಈಗಾಗಲೇ ನೂರಾರು ವಿವಿಧ ಜಾತಿಯ ಮರಗಳನ್ನು ಕಡೆದು ಹಾಕಿ ಸುಮಾರು 1 ಕಿ.ಮೀ. ವರೆಗೆ ರಸ್ತೆ ನಿರ್ಮಾಣ ಮಾಡಿದ್ದು, ಇನ್ನು ರಸ್ತೆ ನಿರ್ಮಾಣದ ಕಾರ್ಯ ಮುಂದುವರೆದಿದೆ. ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಅಕ್ಷಮ್ಯ ಅಪರಾಧ.
ಖಾಸಗಿ ವ್ಯಕ್ತಿಗಳು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಶಾಮಿಲಾಗಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಹಾಗೂ ಬೆಲೆ ಬಾಳುವ ಮರಗಳನ್ನುವಿನಂತಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆದ್ದರಿಂದ ಕೂಡಲೇ ಧಾರವಾಡ ವಲಯದ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ರಸ್ತೆ ನಿರ್ಮಾಣ ಮಾಡುತ್ತಿರುವಂತಹ ಖಾಸಗಿ ವ್ಯಕ್ತಿಗಳ ಮೇಲೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ಕುಮಾರ ಅಗಸಿಮನಿ, ನವೀನ ಪ್ಯಾಟಿ, ಸುಮಿತಸಿಂಗ್ ಇತರರಿದ್ದರು.