ವಿಜಯಪುರದಲ್ಲಿ ಭಗವಾನ್ ರೆಡ್ಡಿ ಹಾಗೂ ಇತರ ನಾಯಕರ ಬಂಧನವನ್ನು ವಿರೋಧಿಸಿ ಮುಮ್ಮಿಗಟ್ಟಿಯಲ್ಲಿ ಪ್ರತಿಭಟನೆ.
ಧಾರವಾಡ : ಭಗವಾನ್ ರೆಡ್ಡಿ ಹಾಗೂ ಇತರ ನಾಯಕರ ಬಂಧನವನ್ನು ಎಐಕೆಕೆಎಮ್ಎಸ್ ಜಿಲ್ಲಾ ಸಮಿತಿಯಿಂದ ವಿರೋಧಿಸಿ ಮುಮ್ಮಿಗಟ್ಟಿಯಲ್ಲಿ ಪ್ರತಿಭಟಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಉಪಾಧ್ಯಕ್ಷೆ ವಿ ನಾಗಮ್ಮಾಳ್ ರವರು ಮಾತನಾಡಿದರು. ಅಧ್ಯಕ್ಷತೆಯನ್ನ ಜಿಲ್ಲಾ ಅಧ್ಯಕ್ಷೆ ದೀಪಾ ಧಾರಾವಾಡ ವಹಿಸಿದ್ದರು.
ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಎಐಕೆಕೆಎಮ್ಎಸ್ ಅಖಿಲ ಭಾರತ ಕಾರ್ಯದರ್ಶಿ ಮಂಡಳಿ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿಯಾದ ಭಗವಾನ್ ರೆಡ್ಡಿ ಅವರ ಬಂಧನವನ್ನು ತೀವ್ರವಾಗಿ ಖಂಡಿಸುತ್ತದೆ.
ಭಗವಾನ್ ರೆಡ್ಡಿ ಅವರು ವಿಜಯಪುರ ಹೋರಾಟ ಸಮಿತಿಯ ಕಾರ್ಯಕಾರಿ ಸಮಿತಿ ಮತ್ತು ಕೋರ್ ಕಮಿಟಿ ಸದಸ್ಯರಾಗಿದ್ದು, ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ, ಸರ್ಕಾರ ಜಾರಿಗೊಳಿಸಲು ಹೊರಟಿರುವ ಪಿಪಿಪಿ (ಸಾರ್ವಜನಿಕ–ಖಾಸಗಿ ಸಹಭಾಗಿತ್ವ) ಮಾದರಿಯನ್ನು ವಿರೋಧಿಸುವ ದೀರ್ಘಕಾಲೀನ ಜನಾಂದೋಲನವನ್ನು ಮುನ್ನಡೆಸುತ್ತಿರುವ ಪ್ರಮುಖ ನಾಯಕರಾಗಿದ್ದಾರೆ.
ಸರ್ಕಾರ ಜನರ ನ್ಯಾಯಸಮ್ಮತ ಬೇಡಿಕೆಗಳನ್ನು ನಿರಂತರವಾಗಿ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ, ಹಲವು ದಿನಗಳಿಂದ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ನಡೆಯುತ್ತಿತ್ತು. ಈ ಚಳವಳಿಗೆ ವಿಜಯಪುರ ಜಿಲ್ಲೆಾದ್ಯಂತ ವ್ಯಾಪಕ ಜನಬೆಂಬಲ ಲಭಿಸಿತ್ತು. ನಿನ್ನೆ, ವಿಜಯಪುರದ ಇನ್ಚಾರ್ಜ್ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ, ಭಗವಾನ್ ರೆಡ್ಡಿ ಹಾಗೂ ಇತರ ನಾಯಕರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿ, ಐಪಿಸಿ 307 ಸೇರಿದಂತೆ ಗಂಭೀರ ಹಾಗೂ ಜಾಮೀನುರಹಿತ ಸೆಕ್ಷನ್ಗಳನ್ನು ಒಳಗೊಂಡ ಸುಳ್ಳು ಮತ್ತು ಕೃತಕ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜನರಿಗೆ ಲಭ್ಯವಾಗಬೇಕಾದ ಸಾರ್ವಜನಿಕ ಆರೋಗ್ಯ ಸೇವೆಗಾಗಿ ನಡೆಯುತ್ತಿರುವ ಜನಾಂದೋಲನವನ್ನು ಕುಗ್ಗಿಸಲು ಸರ್ಕಾರ ಕೈಗೊಂಡಿರುವ ಇದು ಅತ್ಯಂತ ಹೀನ ಮತ್ತು ಅಧಿಕಾರಶಾಹಿ ಕ್ರಮವಾಗಿದೆ. ಜನರನ್ನು ಭಯಭೀತಗೊಳಿಸಿ ಹೋರಾಟ ಇನ್ನಷ್ಟು ವ್ಯಾಪಿಸುವುದನ್ನು ತಡೆಯುವುದೇ ಈ ಬಂಧನಗಳ ಉದ್ದೇಶವಾಗಿದೆ.
ಭಗವಾನ್ ರೆಡ್ಡಿ ಅವರು ವಿಜಯಪುರ ಜಿಲ್ಲೆ ಸೇರಿದಂತೆ ಕರ್ನಾಟಕದಾದ್ಯಂತ ಹಲವು ಜನಪರ ಹೋರಾಟಗಳ ಮುಂಚೂಣಿಯಲ್ಲಿದ್ದು, ಖಾಸಗೀಕರಣದ ವಿರುದ್ಧ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಸದಾ ಹೋರಾಡಿಕೊಂಡು ಬಂದಿದ್ದಾರೆ. ಇಂತಹ ನಾಯಕರನ್ನು ಗುರಿಯಾಗಿಸುವುದು ಸರ್ಕಾರದ ಜನವಿರೋಧಿ ಮತ್ತು ಕಾರ್ಪೊರೇಟ್ ಪರ ಧೋರಣೆಯನ್ನು ಬಹಿರಂಗಪಡಿಸುತ್ತದೆ.
ಎಐಕೆಕೆಎಮ್ಎಸ್ ಈ ದಮನಾತ್ಮಕ ಕ್ರಮವನ್ನು ತೀವ್ರವಾಗಿ ಖಂಡಿಸಿ, ಭಗವಾನ್ ರೆಡ್ಡಿ ಸೇರಿದಂತೆ ಬಂಧಿತಗೊಂಡಿರುವ ಎಲ್ಲಾ ನಾಯಕರು ಹಾಗೂ ಹಲವಾರು ಮಹಿಳಾ ಕಾರ್ಯಕರ್ತರನ್ನು ತಕ್ಷಣ ಮತ್ತು ಷರತ್ತುರಹಿತವಾಗಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತದೆ. ಇಂತಹ ದಮನದಿಂದ ಜನರ ಹೋರಾಟದ ದೃಢನಿಶ್ಚಯ ಇನ್ನಷ್ಟು ಬಲಗೊಳ್ಳಲಿದೆ ಹಾಗೂ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಾಗಿ ನಡೆಯುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತದೆ.
ಭಗವಾನ್ ರೆಡ್ಡಿ ಹಾಗೂ ರೈತ,ಹಾಗೂ ಎಸ್ಕೆಎಮ್ ನಾಯಕರು ಹಾಗೂ ಇನ್ನಿತರರ ಬಿಡುಗಡೆಗಾಗಿ ಒತ್ತಾಯಿಸಿ ದೇಶವ್ಯಾಪಿ ಪ್ರತಿಭಟನೆಗೆ ಎಐಕೆಕೆಎಮ್ಎಸಕರೆ ನೀಡುತ್ತದೆ.
ಪ್ರತಿಭಟನೆಯಲ್ಲಿ ಎಐಕೆಕೆಎಮ್ಎಸ್ ನ ಜಿಲ್ಲಾ ಅಧ್ಯಕ್ಷೆ ದೀಪಾ ಧಾರವಾಡ ಹಾಗೂ ಗ್ರಾಮ ಸಮಿತಿಯ ಸದಸ್ಯರಾದ ಅಡೆವ್ವಾ, ಸಾವಕ್ಕ, ಮರೆವ್ವಾ, ಮಡಿವಾಳಪ್ಪ ಇನ್ನಿತರರು ಇದ್ದರು.
ಭಗವಾನ್ ರೆಡ್ಡಿಯನ್ನು ತಕ್ಷಣ ಬಿಡುಗಡೆ ಮಾಡಿ! ಪ್ರಜಾಸತ್ತಾತ್ಮಕ ಚಳವಳಿಗಳ ಮೇಲಿನ ದಮನ ನಿಲ್ಲಿಸಿ! ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ PPP ಮಾದರಿ ದಿಕ್ಕರಿಸಿ – ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಉಳಿಸಿ. ಸರ್ಕಾರಿ ಆಸ್ಪತ್ರೆ ತೆರೆಯಿರಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.





