
ಧಾರವಾಡ 10 : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವ ಕುರಿತು ರಾಜ್ಯ ಸರ್ಕಾರವು ಇದೇ ವರ್ಷದ ಜನವರಿ ತಿಂಗಳಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಸದರಿ ಅಧಿಸೂಚನೆಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಭೆಯಲ್ಲಿ ಒಮ್ಮತದಿಂದ ನಿರ್ಣಯಿಸಿದ ಪ್ರಕಾರ ಹಾಗೂ ರಾಜ್ಯ ಸಂಪುಟ ಸಭೆಯಲ್ಲಿ ಅನುಮೋದನೆಯಾದ ಪ್ರಕಾರ ಹೊರಡಿಸಲಾಗಿತ್ತು. ಕರಡು ಅಧಿಸೂಚನೆಗೆ ಬಂದ ಸಲಹೆ ಸೂಚನೆಗಳು, ಅಕ್ಷೇಪಣೆಗಳ ಕುರಿತು ಮಹಾನಗರ ಪಾಲಿಕೆಯ ಆಯುಕ್ತರು, ಧಾರವಾಡ ಜಿಲ್ಲಾಧಿಕಾರಿಗಳಿಂದ ವಿವರವಾದ ವರದಿ ಪಡೆದು ಸರಕಾರ ಅಂತಿಮ ಅಧಿಸೂಚನೆಯನ್ನು ರಾಜ್ಯಪಾಲರ ಅನುಮೋದನೆಗೆ ಸುಮಾರು ಒಂದು ತಿಂಗಳ ಹಿಂದೆಯೇ ಕಳುಹಿಸಿರುವದಾಗಿ ತಿಳಿದು ಬಂದಿದೆ ಎಂದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವೆಂಕಟೇಶ ಮಾಚಕನೂರ ತಿಳಸಿದರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಆದರೆ ಸದರಿ ಅಧಿಸೂಚನೆಗೆ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಹ್ಲಾದ ಜೋಶಿ ಅವರು. ರಾಜ್ಯಪಾಲರ ಬಳಿ ಅಕ್ಷೇಪ ವ್ಯಕ್ತಪಡಿಸಿ ತಡೆ ವಡ್ಡಿದ್ದಾರೆಯೇ? ತಮ್ಮ ಮನಸ್ಸಿನ ಮಾತನ್ನು ಮಾಜಿ ಮಹಾಪೌರ ಈರೇಶ್ ಅಂಚಟಗೇರಿ ಅವರ ಮುಖಾಂತರ ಹೇಳಿಸುತ್ತಿದ್ದಾರೆಯೇ? ಎಂದು ಸಂಶಯ ಉಂಟಾಗುತ್ತದೆ. ಈರೇಶ ಅಂಚಟಗೇರಿ ಇವರು ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾಗಿ ಧಾರವಾಡ ನಗರಕ್ಕೆ ವಿರುದ್ಧವಾದ ನಡೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಸಂಸದರು, ಶಾಸಕರು ಲಿಖಿತಪತ್ರ ನೀಡಿದ್ದಾರೆ. ವಿಷಯ ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ಮಹಾನಗರ ಪಾಲಿಕೆ ತನ್ನ ಸಾಮಾನ್ಯ ಸಭೆಯಲ್ಲಿ ಪಾಲಿಕೆಯನ್ನು ವಿಭಜಿಸಲು ಒಮ್ಮತದ ನಿರ್ಣಯ ಕೈಗೊಂಡಿದೆ. ರಾಜ್ಯ ಸಂಪುಟದ ಸಭೆಯಲ್ಲಿ ಧಾರವಾಡ ಪ್ರತ್ಯೇಕ ಪಾಲಿಕೆ ರಚನೆ ಕುರಿತು ನಿರ್ಣಯವಾದ ಮೇಲೆ ಧಾರವಾಡ ನಗರದ ತುಂಬೆಲ್ಲ ಸಂಸದರು, ಶಾಸಕರು ದೊಡ್ಡ ದೊಡ್ಡ ಬ್ಯಾನರ್ ಗಳನ್ನು ಹಾಕಿ ಸಂಭ್ರಮಿಸಿದ್ದಾರೆ.
ಈಗ ಅಂತಿಮ ಅಧಿಸೂಚನೆಗೆ ಅವರೇ ತಡೆಯೋಡಲೆತ್ನಿಸಿರುವುದು ಅವರ ಸಂಕುಚಿತ ರಾಜಕೀಯ ನಡೆಯಾಗುತ್ತದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಆಗದ ಕಾರಣ ಪ್ರತಿ ವರ್ಷ ಎರಡೂ ನಗರಗಳು ವಿವಿಧ ಯೋಜನೆಗಳಡಿ ಪ್ರತ್ಯೇಕವಾಗಿ ದೊರಕಬಹುದಾದ ನೂರಾರು ಕೋಟಿ ರೂಪಾಯಿ ಅನುದಾನವನ್ನು ಕಳೆದುಕೊಳ್ಳುತ್ತಿವೆ. ಇದರಿಂದಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ ಎಂದರು .
ಧಾರವಾಡ ನಗರವು ಸ್ಮಾರ್ಟ್ ಸಿಟಿ ಯೋಜನೆಯಿಂದ ವಂಚಿತವಾಗಿದೆ. ಹೀಗಾಗಿ ಧಾರವಾಡ ನಗರ ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಧಾರವಾಡ ನಗರದ ಅಭಿವೃದ್ಧಿ ಕುರಿತು ಕಿಂಚಿತ್ತು ಕಾಳಜಿ ವಹಿಸದ ಸಂಸದರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಆಗುವುದಕ್ಕೆ ಅಡ್ಡಿ ಉಂಟು ಮಾಡುವ ಮೂಲಕ ಧಾರವಾಡ ನಗರ ಕುರಿತು ಮಲತಾಯಿ ಧೋರಣೆ ತೋರುತ್ತಿದ್ದಾರೆ. ಎರಡು ನಗರಗಳ ಅಭಿವೃದ್ಧಿ ಕುರಿತು ದೂರ ದೃಷ್ಟಿಯ ಕೊರತೆ ಕಂಡು ಬರುತ್ತದೆ.
ಇದನ್ನು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಮತ್ತು ಅಭಿವೃದ್ಧಿ ವೇದಿಕೆಯು ಖಂಡಿಸುತ್ತದೆ ಹಾಗೂ ಮಾನ್ಯ ರಾಜ್ಯಪಾಲರು ಎರಡು ನಗರಗಳ ಅಭಿವೃದ್ಧಿ ಮತ್ತು ಜನರ ಅಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕಳೆದ ಮೂರು ವರ್ಷಗಳಿಂದ ಧಾರವಾಡದ ನಾಗರಿಕರು ವಿವಿಧ ಹಂತದಲ್ಲಿ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ನಡೆಸಿದ ಹೋರಾಟವನ್ನು ಅನುಲಕ್ಷಿಸಿ ಕೂಡಲೇ ಅಂತಿಮ ಅಧಿಸೂಚನೆಯನ್ನು ಅನುಮೋದಿಸಬೇಕೆಂದು ಒತ್ತಾಯಿಸುತ್ತದೆ ಎಂದರು.
ಹುಬ್ಬಳ್ಳಿ ಧಾರವಾಡ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಒತ್ತಾಯಿಸಬೇಕೆಂದು ವೇದಿಕೆಯು ಕೋರುತ್ತದೆ. ಅಧಿಸೂಚನೆ ಅನುಮೋದನೆ ಆಗುವವರೆಗೆ ಧಾರವಾಡ ನಗರಕ್ಕೆ ಭೇಟಿ ನೀಡುವ ಸಂಸದರು ಹಾಗೂ ಹುಬ್ಬಳ್ಳಿ ಧಾರವಾಡ ಪಶ್ಚಿಮ ಶಾಸಕರ ವಿರುದ್ಧ ವೇದಿಕೆ ವತಿಯಿಂದ ಕಪ್ಪು ಬಾವುಟ ಪ್ರದರ್ಶಿಸಲಾಗುವುದು. ಮುಂದುವರೆದು ಧಾರವಾಡ ನಗರ ಬಂದ್ ಕೂಡ ಕರೆ ಕೊಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ವಿಠಲ ಕಮ್ಮಾರ,ದಾನಪ್ಪ ಕಬ್ಬೆರ್,ಮುಂತಾದವರು ಇದ್ದರು.