ಧಾರವಾಡ ಜನೇವರಿ 01 : ಹುಬ್ಬಳ್ಳಿ ಧಾರವಾಡ ಸಂಪರ್ಕದ ಬಿ ಆರ್ ಟಿ ಎಸ್ ಮಾರ್ಗದಲ್ಲಿ ಇತರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಶುಲ್ಕ ( ಟೋಲ್ ) ವಸೂಲಿ ಮಾಡುವಂತೆ ಬಿ ಆರ್ ಟಿ ಎಸ್ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಹೇಳಿಕೆಯನ್ನು ನೀಡಿದ್ದಾರೆ. ಇದನ್ನು ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದ ಧಾರವಾಡ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಹುಬ್ಬಳ್ಳಿ ಧಾರವಾಡ ಮಧ್ಯ ಬಿ ಆರ್ ಟಿ ಎಸ್ ಯೋಜನೆ ಪ್ರಾರಂಭದಿಂದಲೇ ಹಲವಾರು ಅಪಘಾತಗಳಿಂದಾಗಿ, ಸಾವು ಮತ್ತು ನೋವುಗಳಿಂದಾಗಿ ಅವಳಿ ನಗರದ ಜನರನ್ನು ಸಂಕಷ್ಟಕ್ಕೀಡುಮಾಡಿದೆ. ಪ್ರತಿದಿನವೂ ಕೂಡ ಟ್ರಾಫಿಕ್ ತೊಂದರೆಯಿಂದ ಅವಳಿ ನಗರದ ಜನತೆಗೆ ತುಂಬಾ ತೊಂದರೆ ಆಗುತ್ತಿದೆ.
ಈ ತೊಂದರೆಗೆ ವೈಜ್ಞಾನಿಕ ಪರಿಹಾರ ಹುಡುಕುವ ಬದಲು ಬಿ ಆರ್ ಟಿ ಎಸ್ ರಸ್ತೆಯಲ್ಲಿ ಬೇರೆ ವಾಹನಗಳಿಗೆ ಅವಕಾಶ ಕಲ್ಪಿಸಿ ಟೋಲ್ ಸಂಗ್ರಹ ಮಾಡುಬೇಕೆಂದು ಹೇಳಿರುವುದು ಜನರ ಜೇಬಿಗೆ ಕತ್ತರಿ ಹಾಕಲು, ಜನಪ್ರತಿನಿಧಿಯಾದ ಅರವಿಂದ ಬೆಲ್ಲದರವರು ಸಲಹೆ ನೀಡಿರುವುದು ವಿಪರ್ಯಾಸ. ಶಾಸಕರು ಕೊಟ್ಟ ಸಲಹೆಗಳು ವಾಸ್ತವವಾಗಿ ಈಗಿರುವ ಸಮಸ್ಯೆಗಳನ್ನು ಪರಿಹರಿಸುವ ಬದಲು ಇನ್ನು ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.
ಆದ್ದರಿಂದ ಈಗಿರುವ ಸಮಸ್ಯೆಗೆ ಪರಿಹಾರ ಹುಡುಕಲು ಸಾರ್ವಜನಿಕರಿಂದ ಮುಕ್ತ ಸಲಹೆಗಳನ್ನು ಸ್ವೀಕರಿಸಲು ಒಂದು ಸಭೆಯನ್ನು ಕರೆಯಬೇಕೆಂದು ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷವು ಒತ್ತಾಯಿಸುತ್ತದೆ. ಇಲ್ಲವಾದಲ್ಲಿ ಅವಳಿ ನಗರದ ಜನತೆ ಒಂದಾಗಿ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡುತ್ತದೆ.
ಜಿಲ್ಲಾ ಕಾರ್ಯದರ್ಶಿ,ಎಸ್ ಯು ಸಿ ಐ (ಕಮ್ಯುನಿಸ್ಟ್ ) ಲಕ್ಷ್ಮಣ ಜಡಗನ್ನವರ ಪತ್ರಿಕಾ ಪ್ರಕಟನೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.