ಧಾರವಾಡ 03 : ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯ, ಜಲ ಸಂಪನ್ಮೂಲ ಇಲಾಖೆ ನೀತಿ ಆಯೋಗವು ಸದಸ್ಯರ ಅಧ್ಯಕ್ಷತೆಯಲ್ಲಿ ದೇಶದ ವಿವಿಧ ಸಂಘ, ಸಂಸ್ಥೆಗಳು ಹಾಗೂ ಇಲಾಖೆಗಳ ಕಾರ್ಯದರ್ಶಿಗಳು, ಅಧ್ಯಕ್ಷರು, ನಿರ್ದೇಶಕರು ಮತ್ತು ವಿಷಯ ತಜ್ಞರನ್ನು ಒಳಗೊಂಡ ಸಮಗ್ರ ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆ ಕುರಿತು ರಾಷ್ಟ್ರೀಯ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಿದೆ.
ರಾಷ್ಟ್ರೀಯ ಟಾಸ್ಕ್ ಫೋರ್ಸ್ ಸಮಿತಿಗೆ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ನಿರ್ದೇಶಕರಾದ ಡಾ. ರಾಜೇಂದ್ರ ಪೋದ್ದಾರ ಅವರನ್ನು ನೇಮಿಸಲಾಗಿದೆ. ರಾಷ್ಟ್ರೀಯ ಟಾಸ್ಕ್ ಫೋರ್ಸ್ ಸಮಿತಿಯ ಅವಧಿ ಎರಡು ವರ್ಷಗಳದ್ದಾಗಿದೆ. ಸಮಿತಿಯು ಸಮಗ್ರ ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧಿಸಿದಂತೆ ವರದಿಯನ್ನು ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.
ಟಾಸ್ಕ್ ಫೋರ್ಸ್ ಸಮಿತಿಯ ಮುಖ್ಯ ಜವಾಬ್ದಾರಿ ದೇಶದ ನದಿ, ಕೊಳ್ಳಗಳ ಜಲ ಸಂಪನ್ಮೂಲ ಲಭ್ಯತೆ ಹಾಗೂ ಬಳಕೆಯನ್ನು ಅಧ್ಯಯನ, ಸಮಗ್ರ ಜಲ ಸಂಪನ್ಮೂಲ ನಿರ್ವಹಣೆಗಾಗಿ ನೀಲ ನಕ್ಷೆ ಸಿದ್ಧಪಡಿಸುವುದು, ಸಮರ್ಪಕ ಜಲ ನಿರ್ವಹಣೆಗೆ ನೀತಿ ನಿರೂಪಣೆ, ಜಲ ನಿರ್ವಹಣೆ ಕುರಿತು. ಸಂಶೋಧನೆ, ಅಭಿವೃದ್ಧಿ ಹಾಗೂ ಅವಶ್ಯಕ ಬಂಡವಾಳ ಹೂಡಿಕೆ ಕುರಿತು ಸಲಹೆಗಳನ್ನು ನೀಡುವುದಾಗಿರುತ್ತದೆ. ಸಮಿತಿಯು ವಿವಿಧ ಅಧ್ಯಯನಗಳನ್ನು ಕೈಕೊಂಡು ಜಲ ಸಂಪನ್ಮೂಲ ಕುರಿತಂತೆ ನೀತಿ ನಿರೂಪಕ ಅಂಶಗಳು, ಸುಧಾರಣೆಗಳು, ಸಾಮಥ್ರ್ಯ ವರ್ಧನೆ, ತಂತ್ರಜ್ಞಾನ ಅಳವಡಿಕೆ ಕುರಿತು ಸಮಗ್ರ ವರದಿಯನ್ನು ಸಲ್ಲಿಸಲಿದೆ.
ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ನಿರ್ದೇಶಕರನ್ನು ಸದರಿ ಸಮಗ್ರ ಜಲ ಸಂಪನ್ಮೂಲ ಅಭಿವೃದ್ಧಿ ಮತ್ತು ನಿರ್ವಹಣೆಯ ರಾಷ್ಟ್ರೀಯ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಾಗಿ ನೇಮಿಸಿರುವುದು ವಾಲ್ಮಿ ಸಂಸ್ಥೆಗೆ ಸಂದ ಗೌರವಾಗಿದೆ.
ವಾಲ್ಮಿ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಾಯ-ಸಹಕಾರ ನೀಡಿದ ಕರ್ನಾಟಕ ಸರ್ಕಾರ, ಜಲ ಸಂಪನ್ಮೂಲ ಇಲಾಖೆ, ವಾಲ್ಮಿ ಸಿಬ್ಬಂದಿ ಹಾಗೂ ರೈತ ಸಮುದಾಯಕ್ಕೆ ಕೃತಜ್ಞತೆಯನ್ನು ವಾಲ್ಮಿ ಸಂಸ್ಥೆಯು ಪ್ರಕಟಣೆ ಮೂಲಕ ತಿಳಿಸಿದೆ.