
ಧಾರವಾಡ 11 :ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಬಿಸಿಯೂಟ ಕಾರ್ಮಿಕರ ಸಂಘ(ರಿ)ದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಇಂದು ಬಿಸಿಯೂಟ ಕಾರ್ಮಿಕರಿಗೆ ಇಂದಿನ ಬೆಲೆಯೇರಿಕೆಗೆ ಅನುಗುಣವಾಗಿ ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ನಿಯೋಗದಲ್ಲಿ ತೆರಳಿ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಗಂಗಾಧರ ಬಡಿಗೇರ, ಬಿಸಿಯೂಟ ಯೋಜನೆಯ ಯಶಸ್ಸಿಗಾಗಿ ಹಗಲಿರುಳು ದುಡಿಯುತ್ತಿರುವವರು ಬಿಸಿಯೂಟ ಕಾರ್ಮಿಕರು. ಎಲ್ಲ ಮಕ್ಕಳಿಗೆ ತಾಯಂದಿರಾಗಿ ಬಿಡಿಗಾಸಿಗೆ ದುಡಿಯುತ್ತಿದ್ದಾರೆ. 2013ರಿಂದ ರಾಜ್ಯದ ಕ್ಷೀರಭಾಗ್ಯ. ಬರಪೀಡಿತ ಪ್ರದೇಶಗಳಲ್ಲಿ ಬೇಸಿಗೆ ರಜೆಯಲ್ಲಿ ಮಧ್ಯಾಹ್ನದ ಉಪಾಹಾರ, ಅಥವಾ ಇದೀಗ ಅಜೀಂ ಪ್ರೇಮ್ಜಿ ಫೌಂಡೇಶನ್ನಿAದ ಮೊಟ್ಟೆಯ ಕೊಡುವ ಯೋಜನೆ ಈ ಎಲ್ಲ ಯೋಜನೆಗಳು ಯಶಸ್ವಿಯಾಲು ಮುಖ್ಯ ಕಾರಣ ಬಿಸಿಯೂಟ ಕಾರ್ಮಿಕರ ಪರಿಶ್ರಮ. ಇವರ ಪರಿಶ್ರಮದಿಂದಾಗಿ ಶಾಲಾ ದಾಖಲಾತಿ ಮತ್ತು ಹಾಜರಾತಿ ಹೆಚ್ಚಳವಾಗಿದೆ. ಶಾಲೆಯನ್ನು ಮಧ್ಯೆ ಮಧ್ಯೆ ತೊರೆಯುವುದನ್ನು ತಡೆಗಟ್ಟುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಆದರೆ ಈ ಕಾರ್ಮಿಕರು ಕೇಂದ್ರದ 1100 ರೂ ಮತ್ತು ರಾಜ್ಯದ 2500 ರೂ.ಒಟ್ಟು ಸೇರಿ ಕೇವಲ 3600-3700 ರೂ.ಗಳ ಬಿಡಿಗಾಸಿನ ಮಾಸಿಕ ಗೌರವಧನಕ್ಕೆ ದುಡಿಯಬೇಕಾಗಿದೆ. ನಗರ ಪ್ರದೇಶಗಳಲ್ಲಿ ಈ ಹಣದಿಂದ ಒಂದು ತಿಂಗಳ ಮನೆಬಾಡಿಗೆ ಕೂಡ ಕಟ್ಟಲು ಆಗುವುದಿಲ್ಲ. ಇನ್ನು ಇಂದಿನ ಬೆಲೆಯೇರಿಕೆಯ ದಿನಗಳಿಗೆ ಹೋಲಿಸಿದರೇ ಈ ಗೌರವಧನವೆಂಬ ಹಣಕ್ಕೇ ಗೌರವವೇ ಇಲ್ಲ ಎಂಬಂತಾಗಿದೆ. ಕಳೆದ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿದ್ದ ವೇತನಹೆಚ್ಚಳ ಬರಲೇಯಿಲ್ಲ. ಇತ್ತೀಚಿಗಷ್ಟೇ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು 40ಸಾವಿರ ನಿವೃತ್ತಿಯ ಇಡಿಗಂಟು ನಿಗದಿಯಾಗಿದೆ. ಬಹುತೇಕವಾಗಿ ಇವರುಗಳು ಒಂಟಿ ತಾಯಂದಿರು, ವಿಧವೆಯರು, ಕುಟುಂಬದ ಜವಾಬ್ದಾರಿ ಹೊತ್ತಿರುವರೇ ಆಗಿದ್ದು ಇಷ್ಟೊಂದು ಅಲ್ಪ ವೇತನದಿಂದಾಗಿ ಇವರ ಕುಟುಂಬಗಳು ಬೆಲೆಯೇರಿಕೆಯ ದಿನಗಳನ್ನು ಎದುರಿಸಲಾರದೇ ಬೀದಿಗೆ ಬರುವಂತಾಗಿದೆ. ಈ ನಿಟ್ಟಿನಲ್ಲಿ ಈ ಬಿಸಿಯೂಟ ಕಾರ್ಮಿಕರ ವೇತನವನ್ನು ಹೆಚ್ಚಳ ಮಾಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ(ರಿ)ದ ವತಿಯಿಂದ ದಿನಾಂಕ 14 ರಂದು ರಾಜ್ಯ ಮಟ್ಟದ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ.
ಈ ಹೋರಾಟಕ್ಕೆ ಧಾರವಾಡ ಜಿಲ್ಲೆಯ ಸಮಸ್ತ ಬಿಸಿಯೂಟ ಕಾರ್ಮಿಕರು ಭಾಗವಹಿಸಿ ಯಶಸ್ವಿಗೊಳಿಸಲು ಎಐಯುಟಿಯುಸಿ ಕರೆ ನೀಡುತ್ತದೆ,ಎಂದರು.
ನಿಯೋಗದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಜೋತಿ ವಾಯಚಾಳ,ರೇಣುಕಾ ಹೂಗಾರ,ಸುನಂದಾ ಹೊಂಗಲ,ಅಕ್ಕಮ್ಮ ಚಿಕ್ಕೋಡಿ,ಫಕ್ಕೀರವ್ವ ಭೋವಿ,ಶಿವಬಸಮ್ಮ ಮುಂತಾದವರು ಇದ್ದರು.