ಧಾರವಾಡ : ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಉತ್ತಮಪಡಿಸಲು ಆಗ್ರಹಿಸಿ ಎಸ್ಯುಸಿಐ(ಕಮ್ಯುನಿಸ್ಟ್)ಪಕ್ಷದಿಂದ ಜನವರಿ 30 ರಂದು ನಡೆಯುತ್ತಿರುವ ಹೋರಾಟದ ಪ್ರಚಾರಾಂದೋಲನ ಹಾಗೂ ಸಹಿಸಂಗ್ರಹ ಅಭಿಯಾನ
ಧಾರವಾಡದ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ಆರ್ಐ ಸೇರಿದಂತೆ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ಒದಗಿಸಲು ಅಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್, ಎಸ್.ಯು.ಸಿ.ಐ(ಸಿ) ಪಕ್ಷದಿಂದ ಇದೇ ಜನವರಿ 30 ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಇಂದು ಧಾರವಾಡದ ಜಿಲ್ಲಾಸ್ಪತ್ರೆ ಎದುರು ಪ್ರಚಾರಾಂದೋಲನ ಹಾಗೂ ಸಹಿ ಸಂಗ್ರಹ ಅಭಿಯಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ಎಸ್ಯುಸಿಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಗಂಗಾಧರ ಬಡಿಗೇರ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, ಕಿಮ್ಸ್ಆರ್ಐ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳು ಸಮಸ್ಯೆಗಳ ಕೂಪಗಳಾಗಿವೆ. ಅವಶ್ಯಕ ತಜ್ಞ ವೈದ್ಯರ, ದಾದಿಯರ ಮತ್ತಿತರ ಸಿಬ್ಬಂದಿಗಳ ಹಾಗೂ ಆಧುನಿಕ ಯಂತ್ರೋಪಕರಣಗಳ ಕೊರತೆಗಳಂತಹ ಸಮಸ್ಯೆಗಳು ನಿತ್ಯ ಬಾಧಿಸುತ್ತಿವೆ. ಸರ್ಕಾರಗಳಿಂದ ಬರಬೇಕಾದ ಆರ್ಥಿಕ ಅನುದಾನ ಬಂದಿಲ್ಲವೆಂದು ಬಿಪಿಎಲ್ ಕಾರ್ಡದಾರರಿಗೂ ಪ್ರತಿಯೊಂದಕ್ಕೂ ಶುಲ್ಕ ಹೇರಲಾಗಿದೆ. ಇನ್ನೊಂದೆಡೆ ಕೌಂಟರ್ಗಳ ಸಂಖ್ಯೆ ಕಡಿಮೆ ಇರುವುದರಿಂದ ಹೊಸ ಚೀಟಿ ಮಾಡಿಸಲು, ತಪಾಸಣೆ, ಔಷಧಿಗಾಗಿ, ಹಣ ತುಂಬಲು ಹೀಗೆ ಪ್ರತಿಯೊಂದಕ್ಕೂ ದಿನವಿಡೀ ಪಾಳೆಯಲ್ಲಿ ನಿಲ್ಲುವ ಪರಿಸ್ಥಿತಿ ಇದೆ. ಇದರಿಂದಾಗಿ ತಪಾಸಣೆಗೆ ಬಂದ ದಿನವೇ ಸಂಪೂರ್ಣ ಚಿಕಿತ್ಸೆ ದೊರೆಯದಾಗಿದೆ. ರೋಗಿಗಳು ಸಣ್ಣಪುಟ್ಟ ರೋಗಗಳಿಗೂ ವಾರಗಟ್ಟಲೇ/ಹಲವಾರು ಬಾರಿ ಅಲೆದಾಡುವ ಪರಿಸ್ಥಿತಿ ಇದೆ. ಉತ್ತಮ ಗುಣಮಟ್ಟದ ಔಷಧಿಗಳೂ ಕೂಡ ಪೂರೈಕೆಯಾಗುತ್ತಿಲ್ಲ. ಇದಕ್ಕೆ ಬದಲಾಗಿ ಹೊರಗೆ ಬರೆದುಕೊಡುವ ಪರಿಪಾಟ ಹೆಚ್ಚುತ್ತಿದೆ. ಅವುಗಳನ್ನು ಕೊಳ್ಳುವ ಶಕ್ತಿ ನಮ್ಮ ಬಡಜನರಿಗಿದೆಯೇ? ಆದ್ದರಿಂದ ಕೂಡಲೇ ಈ ಸಮಸ್ಯೆಗಳನ್ನು ಪರಿಹರಿಸಬೇಕು. ಬಡವರ ಹಾಗೂ ಜನಸಾಮಾನ್ಯರಿಗೆ ಆರೋಗ್ಯ ಸುರಕ್ಷತೆಗಾಗಿ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಉಳಿಸಲು, ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಯನ್ನು ಉತ್ತಮಪಡಿಸಲು ಹಾಗೂ ಬಲಪಡಿಸಲು ಆಗ್ರಹಿಸಿ ಜನವರಿ 30 ರಂದು ನಡೆಯುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಹೋರಾಟದಲ್ಲಿ ಭಾಗವಹಿಸುವವರು 9449448321 ಗೆ ಸಂಪರ್ಕಿಸಿ.
ಈ ಸಂದರ್ಭದಲ್ಲಿ ಮಧುಲತಾ ಗೌಡರ್, ಭವಾನಿಶಂಕರ ಗೌಡ, ಹನುಮೇಶ ಹುಡೇದ್, ಗಂಗೂಬಾಯಿ ಕೊಕರೆ, ರಣಜಿತ್ ದೂಪದ್, ಶಶಿಕಲಾ ಮೇಟಿ, ಪ್ರೀತಿ ಸಿಂಗಾಡಿ, ದುರ್ಗಪ್ಪ, ರುದ್ರಕಾಂತ್, ಅನುಸೂಯ ಮುಂತಾದವರು ಭಾಗವಹಿಸಿದ್ದರು.
ಹಕ್ಕೊತ್ತಾಯಗಳು
ಧಾರವಾಡ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ಆರ್ಐ ಸೇರಿದಂತೆ ಎಲ್ಲ ತಾಲ್ಲೂಕಾಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸಿ.
ಜಿಲ್ಲಾಸ್ಪತ್ರೆ ಮತ್ತು ಕಿಮ್ಸ್ಆರ್ಐ ಗಳಲ್ಲಿ ಚೀಟಿ, ಹಣ ಪಾವತಿ ಹಾಗೂ ಔಷಧಿ ವಿತರಣಾ ಕೌಂಟರ್ಗಳ ಸಂಖ್ಯೆಯನ್ನು ಕೂಡಲೇ ಹೆಚ್ಚಿಸಿ.
ಧಾರವಾಡ ಜಿಲ್ಲಾಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಬೆಡ್ ಹಾಗೂ ವೈದ್ಯಕೀಯ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಿ.
ಮೂಲಭೂತ ಸೌಕರ್ಯಗಳಾದ ಸುಸಜ್ಜಿತ ಕಟ್ಟಡ, ಶೌಚಾಲಯಗಳು, ಕುಡಿಯುವ ನೀರು, ಆಧುನಿಕ ಯಂತ್ರೋಪಕರಣಗಳು ಹಾಗೂ ಇತರೆ ಸೌಕರ್ಯಗಳನ್ನು ಒದಗಿಸಿ.
ಅವಶ್ಯಕತೆ ಇರುವಷ್ಟು ತಜ್ಞ ವೈದ್ಯರು, ದಾದಿಯರು ಸೇರುದಂತೆ ಇತರೆ ವೈದ್ಯಕೀಯ ಸಿಬ್ಬಂದಿಗಳ ಹಾಗೂ ಡಿ-ದರ್ಜೆ ನೌಕರರನ್ನು ಖಾಯಂ ಆಧಾರದ ಮೇಲೆ ನೇಮಕ ಮಾಡಿಕೊಳ್ಳಿ.
ಬಿಪಿಎಲ್ ಕಾರ್ಡದಾರರೂ ಸೇರಿದಂತೆ ಎಲ್ಲ ಜನಸಾಮಾನ್ಯರಿಗೆ ಉಚಿತ ಚೀಟಿ, ತಪಾಸಣಾ ಪರೀಕ್ಷೆ, ಸ್ಕಾö್ಯನಿಂಗ್, ಆಪರೇಶನ್ ಇತ್ಯಾದಿಗಳಿಗೆ ಅನುಕೂಲ ಮಾಡಿಕೊಡಿ.
ಎಲ್ಲ ಹಂತಗಳ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ನೀಡಲು ಕ್ರಮ ಕೈಗೊಳ್ಳಿ. ಆವಶ್ಯಕ ಔಷಧಿಗಳನ್ನು ಪೂರೈಕೆ ಮಾಡಲು ಕ್ರಮವಹಿಸಿ.
ಜಿಲ್ಲಾಸ್ಪತ್ರೆಯ ಅಂಬುಲನ್ಸ್ಗಳಿಗೆ ಚಾಲಕರು ಸೇರಿದಂತೆ ಆವಶ್ಯಕ ಸಿಬ್ಬಂದಿ ನೇಮಕ ಮಾಡಿರಿ.
ರಾಜ್ಯದಾದ್ಯಂತ ಹೆಚ್ಚುತ್ತಿರುವ ಬಾಣಂತಿಯರ-ನವಜಾತ ಶಿಶುಗಳ ಸಾವನ್ನು ತಡೆಗಟ್ಟಲು ಕ್ರಮಕೈಗೊಳ್ಳಿ.
ಗ್ರಾಮಾಂತರ ಭಾಗದ ಪ್ರಾ.ಆ.ಕೇಂದ್ರಗಳ ಸಂಖ್ಯೆ ಹೆಚ್ಚಿಸಿ ಮತ್ತು ತಾಲ್ಲೂಕಾಸ್ಪತ್ರೆಗಳ ಗುಣಮಟ್ಟ ಹೆಚ್ಚಿಸಿ. ಆಸ್ಪತ್ರೆಗಳ ಆವರಣದಲ್ಲಿ ಸ್ವಚ್ಚತೆಗಾಗಿ ಕ್ರಮವಹಿಸಿ.
ಆರೋಗ್ಯದ ಖಾಸಗೀಕರಣ ನಿಲ್ಲಿಸಿ. ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕಲ್ಪಿಸಲು ಬೇಡಿಕೆಯ ಅಂಗವಾಗಿ ಸಹಿ ಸಂಗ್ರಹ ನಡೆಯಿತು.